Thursday, September 9, 2010

ಜೈನ ಸ್ವಾಮಿಜಿ ಮತ್ತೆ ಅಮೇರಿಕಾಕ್ಕೆ


ಜೈನ ಸ್ವಾಮಿಜಿ ಮತ್ತೆ ಅಮೇರಿಕಾಕ್ಕೆ

ಮೂಡುಬಿದಿರೆಯ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಅವರು ಅಮೇರಿಕಾದ ನ್ಯೂಜೆರ್ಸಿಯ ಸಮಾಜ ಭಾಂಧವರ ಕರೆಯಂತೆ ಸೆಪ್ಟಂಬರ್ ೧೦ ರಿಂದ ಮತ್ತೊಮ್ಮೆ ಧಾರ್ಮಿಕ ಸಂದೇಶದ ವಿದೇಶ ಪ್ರವಾಸ ಕೈಗೊಳ್ಳಲಿರುವರು ಎಂದು ಮಠದ ಪ್ರಕಟಣೆ ತಿಳಿಸಿದೆ.
ಅವರು ಅಲ್ಲಿ ನಡೆಯಲಿರುವ ದಶಲಕ್ಷಣ ಮಹಾ ಪರ್ವದ ವಿಧಿ ವಿಧಾನಗಳನ್ನು ಧಾರ್ಮಿಕ ಆಚರಣೆಯೊಂದಿಗೆ ನಡೆಸಿ ಕೊಡಲಿರುವರು ಮತ್ತು ಅಲ್ಲಿನ ಅಸಂಖ್ಯ ಭಾರತೀಯ ಜಿನ ಧರ್ಮೀಯರಿಗೆ ದರ್ಶನ ಮತ್ತು ಆಶೀರ್ವಚನ ನೀಡಲಿರುವರು.
ಇದು ಅವರ ೨೦ ನೇ ವಿದೇಶ ಪ್ರವಾಸವಾಗಿದ್ದು ಅಮೇರಿಕಾಕ್ಕೆ ೮ ನೇ ಧಾರ್ಮಿಕ ಪ್ರವಾಸವಾಗಿರುವುದು.
ಸಾಹಿತ್ಯ, ಸಂಸ್ಕ್ರತಿ ಗಳ ಬಗೆಗೆ ಅಪಾರ ಪ್ರೀತಿ ಹೊಂದಿರುವ ಅವರು ಮಠದಲ್ಲೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಸಾಹಿತಿಗಳನ್ನು ಧಾರ್ಮಿಕ ನಾಯಕರನ್ನು ಕರೆಸಿ ಕೊಳ್ಳುತ್ತಾರೆ.
ವಿಶೇಷ ಧಾರ್ಮಿಕ ಆಧಾರದ ಮೇಲೆ ಜೈನರು ೨೨೦೦ ವರ್ಷಗಳಿಂದ ಭಾದ್ರಪದ ಚೌತಿಯನ್ನು ಪರ್ಯಾಶನ ಹಬ್ಬವಾಗಿ ಆಚರಿಸುತ್ತಾ ಬಂದಿದ್ದಾರೆ.
ಕಮರ್ ಪಾಲ್ ಎ.ಶಹಾ ಅದ್ಯಕ್ಷರಾಗಿ ಮತ್ತು ಬಕುಲ್ ಶಹಾ ಕಾರ್ಯದರ್ಶಿಯಾಗಿ ಅಲ್ಲಿನ ಜೈನ ಸಮಾಜವನ್ನು ಮುನ್ನಡೆಸುತ್ತಾ ಬಂದಿದ್ದಾರೆ.
ಆಗಸ್ಟ್ ತಿಂಗಳಲ್ಲೂ ಸ್ವಾಮಿಜಿ ಅವರು ಅಮೇರಿಕಾದಲ್ಲಿ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Monday, September 14, 2009

ಫೋಟೋಸ್ ಆಫ್ ಆಳ್ವಾಸ್ ಇಫ್ತಾರ್

http://picasaweb.google.com/tuluva/Iftar?authkey=Gv1sRgCJPpsdrehYanxQE#

Wednesday, September 2, 2009

ಝಿ.ಟಿ.ವಿ ಕುಣಿಯೋಣ ಬಾರಾ ಮಿಂಚಿ ಗೆದ್ದ ಮೂಡುಬಿದಿರೆಯ ಶ್ವೇತಾ

ಝಿ.ಟಿ.ವಿ ಕುಣಿಯೋಣ ಬಾರಾ ಮಿಂಚಿ ಗೆದ್ದ ಮೂಡುಬಿದಿರೆಯ ಶ್ವೇತಾ
ಶೇಖರ ಅಜೆಕಾರು


ಝಿ.ಟಿ.ವಿ ಕುಣಿಯೋಣ ಬಾರಾ _ ೭ ನೃತ್ಯ ಸ್ಪರ್ಧೆಯಲ್ಲಿ ಆರಂಭದಿಂದಲೇ ಗಮನ ಸೆಳೆಯುತ್ತಾ ಬಂದಿರುವ ಮೂಡುಬಿದಿರೆಯ ಬಾಲಪ್ರತಿಭೆ ಶ್ವೇತಾ ಮೊದಲ ಸ್ಥಾನ ಪಡೆದಿದ್ದಾಳೆ. ಸ್ಪರ್ಧೆಯ ಪ್ರತೀ ಹಂತದಲ್ಲಿ ನಿರ್ಣಾಯಕರ ಶಹಾಭಾಸ್ ಪಡೆದ ಶ್ವೇತಾ ಮೂಡುಬಿದಿರೆಯ ಟ್ಯಾಲೆಂಟ್ಸ್ ರಾಜೇಶ್ ಭಟ್ ಅವರ ಶಿಷ್ಯೆ.
ಮಂಗಳವಾರ ರಾತ್ರಿ ೧೦.೨೫ ರ ಹೊತ್ತಿಗೆ ಝಿ ಟಿವಿಯ ಕಾರ್ಯಕ್ರಮದಲ್ಲಿ ಆಕೆಯನ್ನು ವಿಜೇತೆ ಎಂದು ಘೋಷಿಸಲಾಯಿತು. ಬಹುಮಾನವಾಗಿ ೨.೫ ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ನಿರ್ಣಾಯಕರ ಸೀಟಿನಲ್ಲಿ ಶ್ವೇತಾ : ಶ್ವೇತಾ ಅಂತಿಮ ಹಂತದ ಸ್ಪರ್ಧೆಯಲ್ಲಿ ಮೂರು ಮುಖವಾಡ ಸಹಿತ ಬಹು ವೈವಿಧ್ಯತೆಗಳನ್ನೊಳಗೊಂಡು ರಾರಾ ಸರಸಕು ಬಾರಾ ಹಾಡಿಗೆ ಕುಣಿದ ಜೋಶ್‌ಗೆ ಭಾವಪರವಶರಾದ ಒಬ್ಬ ನಿರ್ಣಾಯಕರು ಆಕೆಯನ್ನು ತಮ್ಮ ಸೀಟಿಗೆ ತಂದು ಕುಳ್ಳಿರಿಸಿ ಸೆಲ್ಯೂಟ್ ನೀಡಿದ್ದು ಸ್ಪರ್ಧೆಯ ಅಮೂಲ್ಯ ಕ್ಷಣಗಳನ್ನು ದಾಖಲಿಸಿತು. ಮೈಸೂರಿನ ತನುಷಾ ಮತ್ತು ಬೆಂಗಳೂರಿನ ಶ್ರೀಶಾ ಅಂತಿಮ ಹಂತದ ಸ್ಪರ್ಧೆಯಲ್ಲಿದ್ದರು. ಅನುಶ್ರೀ, ಶ್ವೇತಾಳಿಗೆ ನಿರೂಪಕಿಯಾಗಿದ್ದು ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ಪ್ರಾಯೋಜಕತ್ವದ ೧ ಲಕ್ಷ ರೂಪಾಯಿ ಮೊತ್ತದ ಚಿನ್ನಾಭರಣಗಳ ವಿಜೇತೆಯಾದರು. ಮೂಡುಬಿದಿರೆಯ ಭಾಗ್ಯ : ಝಿ ಟಿವಿ ಸೇರಿದಂತೆ ವಿವಿಧ ಚಾನಲ್‌ಗಳ ರಿಯಾಲಿಟಿ ಶೋಗಳ ಬಹುಮಾನಗಳು ಹೆಚ್ಚಾಗಿ ನಗರ, ಮಹಾನಗರಗಳಿಗೆ ಹರಿದು ಹೋಗುತ್ತಿರುವಾಗ ಆ ಭಾಗ್ಯವನ್ನು ಸಣ್ಣ ಪಟ್ಟಣ ಮೂಡುಬಿದಿರೆಗೆ ಶ್ವೇತಾ ತಿರುಗಿಸಿದ್ದಾಳೆ. ಮೂಡುಬಿದಿರೆಯ ಡಿ.ಜೆ. ಇಂಗ್ಲೀಷ್ ಮಿಡಿಯಂ ಶಾಲೆಯ ೬ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಶ್ವೇತಾ ನಾಟ್ಯಕ್ಕಾಗಿ ಈಗಾಗಲೇ ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಅಪೂರ್ವವೆನಿಸುವ ಮುಖಭಾವ, ಹಾವಭಾವ, ನೃತ್ಯ ಪ್ರದರ್ಶಿಸುವ ಮತ್ತು ಗುರುಗಳು ಹೇಳಿದ ಯಾವುದೇ ಹೆಜ್ಜೆಗಳನ್ನು ತಕ್ಷಣ ಕಲಿಯಬಲ್ಲ ಜಾಣ್ಮೆ ಅವಳಲ್ಲಿದೆ. ೧೦೪೦ ಮಂದಿ ಇದ್ದ ಸ್ಪರ್ಧೆಯಲ್ಲಿ ಆಯ್ಕೆಯಾದ ೨೪ ಮಂದಿಯಲ್ಲಿ ಮೂಡುಬಿದಿರೆಯ ಇಬ್ಬರು ಪ್ರತಿಭೆಗಳಿದ್ದರು. ಮೂಡುಬಿದಿರೆ ಮೈನ್ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ರಂಜನ್ ಮೂಡುಬಿದಿರೆ ಯಶಸ್ವಿಯಾಗಿ ಮೂರು ಸುತ್ತಿನಲ್ಲಿ ಗೆಲುವು ಸಾಧಿಸಿ ವಿರಮಿಸಿದ್ದನು. ರಂಜನ್ ಕೂಡ ರಾಜೇಶ್ ಭಟ್ ಅವರ ಶಿಷ್ಯನೇ ಆಗಿದ್ದಾನೆ.
ಗುರುವಿನ ಸಂತಸ : ನಗರಗಳಿಂದ ಭಾಗವಹಿಸಿದ್ದ ಪುಟಾಣಿ ಸ್ಪರ್ಧೆಗಳಿಗೆ ಕಲಿಸಲು ಹಲವು ಮಂದಿ ನೃತ್ಯ ಗುರುಗಳಿದ್ದರು, ಮಾರ್ಗದರ್ಶನ- ನಿರ್ದೇಶನವಿತ್ತು. ಆದರೆ ಶ್ವೇತಾಳಿಗೆ ಆಕೆಯ ಗುರು ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ ವಿಜೇತ ರಾಜೇಶ್ ಒಬ್ಬರೇ ಗುರುಗಳು. ಅದೊಂದು ಅಪೂರ್ವ ಕ್ಷಣ . . . . . . . ಗೆಲ್ಲಬಹುದೆಂಬ ಭರವಸೆ ಇತ್ತು . . . . . . ಶ್ವೇತಾ ಗೆದ್ದಾಗ ನಾನೇ ಗೆದ್ದಷ್ಟು ಸಂತೋಷವಾಗಿದೆ. ತಿಂಗಳುಗಟ್ಟಲೆ ಮಾಡಿದ ಶ್ರಮ ಸಾರ್ಥಕವಾದ ಖುಷಿಯ ಅನುಭವ ಎಂದು ರಾಜೇಶ್ ಭಟ್ ಪ್ರತಿಕ್ರಿಯಿಸಿದ್ದಾರೆ. ಸದಾ ಹೊಸತನಗಳ ಹುಡುಕಾಟದಲ್ಲಿರುವ ಮತ್ತು ಕ್ರಿಯಾಶೀಲವಾಗಿರುವ ರಾಜೇಶ್ ೨೯ ರ ಯುವಕ. ತಮ್ಮ ಟ್ಯಾಲೆಂಟ್ಸ್ ಸಂಸ್ಥೆ ಈಗ ಗೌರಿ ದೇವಾಲಯದ ಆವರಣದಲ್ಲಿದ್ದು ೫ನೇ ವರ್ಷಕ್ಕೆ ಕಾಲಿಟ್ಟಿದೆ. ಶ್ವೇತಾಳ ವಿಜಯ ೫ ರ ಸಂಭ್ರಮಕ್ಕೆ ಬಂಪರ್ ಕೊಡುಗೆ ಎನ್ನುತ್ತಾರೆ ರಾಜೇಶ್. ಶ್ವೇತಾ ಹೇಳಿದ್ದು : ವಿಜೇತೆಯನ್ನು ಸಂಪರ್ಕಿಸಿದಾಗ ತನ್ನ ೧೧ರ ಹರೆಯದ ಬಾಲ ಸಹಜ ಭಾಷೆಯಲ್ಲಿ ಖುಷಿಯಾಗಿದೆ. ಖುಷಿಯೊಂದಿಗೆ ಒಂದಿಷ್ಟು ದುಃಖವೂ ಬಂದಿತ್ತು. ಇನ್ನೂ ಕಲಿಯಬೇಕು. ದೊಡ್ಡ ಡ್ಯಾನ್ಸ್ ಸ್ಟಾರ್ ಆಗಬೇಕೆಂಬ ಆಸೆ ಮೂಡಿದೆ. ಇದಕ್ಕೆಲ್ಲಾ ಕಾರಣ ಅಪ್ಪ-ಅಮ್ಮ, ರಾಜೇಶ್ ಸಾರ್ ಅವರ ಪ್ರೋತ್ಸಾಹ. ಶ್ವೇತಾಳ ತಂದೆ ಬಾಲಕೃಷ್ಣ, ತಾಯಿ ಶೋಭಾ. ಆಕೆಗೊಬ್ಬಳು ಅಕ್ಕ ಸ್ನೇಹಾ. ನಿರ್ಣಾಯಕರು ಹೇಳಿದ್ದು : ಶ್ವೇತಾಳ ನೃತ್ಯ ಹೇಗಾಯಿತು ಎಂದರೆ ಅಂತಿಮ ಹಂತದ ನಿರ್ಣಾಯಕಿಯಾಗಿದ್ದ ಚಿತ್ರನಟಿ ಛಾಯಸಿಂಗ್ ಪ್ರೀತಿಯಾಯಿತು ಅನ್ನೊದಕ್ಕಿಂತ ನಾನು ಅವಳ ನೃತ್ಯದಲ್ಲಿ ನನ್ನನ್ನು ನಾನೇ ಮೈಮರೆತೆ . . . . . . . . . . ಮೊದಲು ಮಾಸ್ಕ್ ಹಾಕಿಕೊಂಡು ಅವಳು ಕುಣಿದಾಗ ಭಯಗೊಂಡೆ. ರಾರಾ ಅನ್ನುತ್ತಾ ಸಾದಾ ಡ್ರೆಸ್‌ನಲ್ಲಿ ಬಂದ ಮೇಲೆ ಭಯ ಹೋಯಿತು. ರಾಜೇಶ್ ಅವರ ನೃತ್ಯ ನಿರ್ದೇಶನ ಅದ್ಭುತ ಎಂದು ರಾಜೇಶ್ ಅವರತ್ತ ಕೈ ಬೀಸಿ ಪ್ರಶಂಸೆ ವ್ಯಕ್ತಪಡಿಸಿದರು. ಸುಮಾರು ೧೪೫ ಚಿತ್ರಗಳ ನೃತ್ಯ ನಿರ್ದೇಶಕ ತ್ರಿಭುವನ್ ಮಾಸ್ಟರ್ ಒಂದು ಕ್ಷಣ ತಮ್ಮನ್ನು ತಾವೇ ಮರೆತು ಶ್ವೇತಾಳನ್ನು ತನ್ನ ಸೀಟಿಗೆ ಕರೆಸಿ ಕುಳ್ಳಿರಿಸಿ ಸಂಭ್ರಮಿಸಿದಾಗ ಇಡೀ ನಾಡಿನ ಜನತೆ ನಿಬ್ಬೆರಗಾಗುವ ಕ್ಷಣವಿತ್ತು. ತನ್ನ ಜೀವನದಲ್ಲಿ ಎಷ್ಟೋ ಕಡೆ ಸ್ಪರ್ಧೆಗಳಿಗೆ ನಿರ್ಣಾಯಕನಾಗಿ ಹೋಗಿದ್ದೇನೆ, ಅನೇಕ ಪ್ರತಿಭೆಗಳನ್ನು ನೋಡಿದ್ದೇನೆ. ಆದರೆ ಸೀಟಿನಿಂದ ಎದ್ದು ನಿಂತುಕೊಂಡು ನಾನು ಕ್ಲಾಪ್ ಹೊಡೆದದ್ದು ಇದೇ ಮೊದಲ ಬಾರಿ ಇಷ್ಟರವರೆಗೆ ಶ್ವೇತಾಳಷ್ಟು ಇಂಪ್ರೆಸ್ ಮಾಡಿದವರು ಯಾರೂ ಇಲ್ಲ. ಕೆಲವರಿಗೆ ನಟರಾಜ ಆಶೀರ್ವಾದ ಮಾಡುತ್ತಾನೆ, ಆದರೆ ಶ್ವೇತಾಳಲ್ಲಿ ನಟರಾಜನೆ ಸ್ವತಃ ನೆಲೆಸಿದ್ದಾನೆ. ಅದ್ಭುತ . . . . . ಎಂದು ಬಿಟ್ಟರು. ಶ್ವೇತಾಳ ಗೆಲುವಿನ ದಾರಿ: ಆರಂಭಿಕ ಸುತ್ತಿನಲ್ಲಿ ರಾಜ್ ಚಿತ್ರದ ಬಾರೊ ಪೋಲಿ . . . . , ವೀರಮದಕರಿ ಯ ಮಂಜರಿ ಮಂಜರಿ . . . , ನಾಯಕ ನಾಯಕಿ ಸುತ್ತಿನಲ್ಲಿ ಗಾಳಿಪಟ ದ ನದಿಂ ದಿಂ ತನ . . . , ಬಾಲಿವುಡ್ ರೌಂಡ್‌ನಲ್ಲಿ ಸಲಾಮೆ ಇಶ್ಕ್ . . . , ರಿಮಿಕ್ಸ್ ರೌಂಡ್‌ನಲ್ಲಿ ಪರಿಚಯ ಚಿತ್ರದ ಕುಡಿನೋಟವೆ . . . , ರೈನ್ ರೌಂಡ್‌ನಲ್ಲಿ ಟೆಂತ್ ಕ್ಲಾಸ್ ಚಿತ್ರದ ಓ ಮೋಡ ಪೆದ್ದು ಮೋಡ . . . , ಜನಪದ ಸುತ್ತಿನಲ್ಲಿ ಹುಬ್ಬಳ್ಳಿ ಚಿತ್ರದ ಇನ್ನೂ ಯಾಕಾ ಬರಲಿಲ್ಲಾವ ಹುಬ್ಬಳ್ಳಿಯವ . . . (ಸ್ನೇಹ, ನಿಶಾ, ಸಹನಾ, ಪ್ರಮೀಳಾ ಜೊತೆ) ಗೀತೆಗಳಿಗೆ ಶ್ವೇತಾ ಕುಣಿದು ಗೆದ್ದಳು. ಪ್ರಾಪರ್ಟಿ ರೌಂಡ್‌ನಲ್ಲಿ ಶಿವತಾಂಡವ ನೃತ್ಯ, ಕರ್ನಾಟಕ ಸ್ಪೇಷಲ್ ರೌಂಡ್‌ನಲ್ಲಿ ಮಿಂಚಿನ ಓಟ ದ ನೀರಾಟವಾಡಲು . . . ಹಾಡಿಗೆ ಯಕ್ಷಗಾನ ಶೈಲಿಯಲ್ಲಿ ನಿಶಾ, ಸಹನಾ, ಪ್ರಮೀಳಾ, ಜೇಸನ್, ರಂಜನ್ ಜೊತೆಗೂಡಿ ಕುಣಿದಾಗ ಗೆಲುವಿನ ಹಾದಿ ಹತ್ತಿರವಾಗತೊಡಗಿತು. ಮುಂದಿನ ರೌಂಡ್‌ನಲ್ಲಿ ಓಂಕಾರ್ ಚಿತ್ರದ ಗೋಲಿಮಾರ್. . . ಹಾಡಿಗೆ, ಅರಸು ಚಿತ್ರದ ಏಕೊ ಏನೊ ನನ್ನಲ್ಲಿ ಹೊಸ ಆಸೆಯು ಮೂಡುತಿದೆ . . . , ಹಿಸ್ಟೋರಿಕ್ ರೌಂಡ್‌ನಲ್ಲಿ ತಾಳೆಹೂವ ಪೊದೆಯಿಂದ ಜಾರಿ ಜಾರಿ . . . ಓಂಕಾರ ಚಿತ್ರದ ಹಾಡಿಗೆ ಕುಣಿದು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಳು. ಸೆಮಿಫೈನಲ್‌ನಲ್ಲಿ ಮತ್ತು ಶ್ರೀಯಾ ರೌಂಡ್‌ನಲ್ಲಿ ಮಣಿಪುರಿ ಗೊಂಬೆ ನೃತ್ಯವನ್ನು ಗಿಳಿ ರಾಮ ಗಿಳಿ ರಾಮ . . .(ಗಂಡುಗಲಿ ಕುಮಾರ ರಾಮ ಚಿತ್ರ ) ಮತ್ತು ಬಿಡು ಬಿಡು ಕದ್ದು ಕದ್ದು ನೋಡೋದನ್ನ ಹಾಡಿಗೆ ಹೆಜ್ಜೆ ಹಾಕಿ ಗುರುವಿನ ನೃತ್ಯ ನಿರ್ದೇಶನಕ್ಕೆ ತಕ್ಕಂತೆ ಭಾವನೆ ತುಂಬಿ ಗೆಲುವಿನ ತುಂಬಾ ಹತ್ತಿರಕ್ಕೆ ಬಂದಳು ಶ್ವೇತಾ. ಅಂತಿಮ ಸ್ಪರ್ಧೆಯಲ್ಲಿ ರಾರಾ ಸರಸಕು ಬಾರ (ಆಪ್ತಮಿತ್ರ) ಗೀತೆಯ ನೃತ್ಯ - ನೃತ್ಯ ನಿರ್ದೇಶನ ಬೊಂಬಾಟಾಗಿತ್ತು. ಇನ್ನೊಂದು ನೃತ್ಯದೊಂದಿಗೆ ವಿಜಯಲಕ್ಷ್ಮೀ ಶ್ವೇತಾಳಿಗೆ ಒಲಿದೇ ಬಿಟ್ಟಳು. ಮಹಾಭಾರತದ ಚಕ್ರವ್ಯೂಹದಂತೆ ಸ್ಪರ್ಧೆಯ ವಿವಿಧ ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸಿದ ಶ್ವೇತಾ ಝಿ ಟಿವಿಯ ಏಳನೇಯ ಕುಣಿಯೋಣ ಬಾರ ಸ್ಪರ್ಧೆಯ ಗೆಲುವಿನ ಒಡತಿಯಾದಳು. ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುತ್ತಿರುವ ಮೂಡುಬಿದಿರೆಗೆ ನೃತ್ಯ ಕಿರೀಟ ತೊಡಿಸಿದ್ದಾಳೆ ಶ್ವೇತಾ.

Friday, July 24, 2009

ಮೂಡಬಿದಿರೆಯಲ್ಲಿ ಯಕ್ಷ ದೇವ ಕಲಾ ಮಿತ್ರ ಮಂಡಳಿ ಆಯೋಜಿಸಿದ್ದ ಹಿಮ್ಮೇಳ ಸ್ಪರ್ದೆಯನ್ನು ಸಾಹಿತಿ ನಾ.ಮೊಗಸಾಲೆ ಉದ್ಘಾಟಿಸಿದರು.




ಮೂಡಬಿದಿರೆಯಲ್ಲಿ ಯಕ್ಷ ದೇವ ಕಲಾ ಮಿತ್ರ ಮಂಡಳಿ ಆಯೋಜಿಸಿದ್ದ ಹಿಮ್ಮೇಳ ಸ್ಪರ್ದೆಯನ್ನು ಸಾಹಿತಿ ನಾ.ಮೊಗಸಾಲೆ ಉದ್ಘಾಟಿಸಿದರು.ಶ್ರೀಪತಿ ಭಟ್ ,ಕುಬನೂರ್ ಶ್ರೀಧರ್ ರಾವ್,ಮುರಳಿಧರ ಭಟ್, ಉಜಿರೆ ಪದ್ಮನಾಭ ಉಪಾಧ್ಯ ,ದೇವಾನಂದ ಭಟ್ ,ಮಹಾವೀರ ಪಂಡಿ ಮೊದಲಾವರು ಉಪಸ್ಥಿತರಿದ್ದರು.